ಹೊಸಬರ ʻಸುಖೀಭವ’ ಟೀಸರ್ ಔಟ್

ಹೊಸಬರ ʻಸುಖೀಭವ’ ಟೀಸರ್ ಔಟ್

ಹೊಸಬರ ʻಸುಖೀಭವ’ ಚಿತ್ರದ (Sukhibhava) ಟೀಸರ್ ಮತ್ತು ಹಾಡುಗಳ ಬಿಡುಗಡೆ ಕಾರ್ಯಕ್ರಮ ಶ್ರೀರೇಣುಕಾಂಬ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನಡೆಯಿತು. ದಂಪತಿಗಳಾದ ಸಂತೋಷ್ ಕುಮಾರ್, ಭಾರ್ಗವಿ ಸಂತೋಷ್ ಅವರು ಮಗ ವೇದ್ ಆರ್ಯನ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ.

ಯೋಗರಾಜ್ ಭಟ್ ಸೇರಿದಂತೆ ಅನೇಕರ ಬಳಿ ಸಹಾಯಕರಾಗಿ ಗುರುತಿಸಿಕೊಂಡಿದ್ದ ಮೈಸೂರು ಮೂಲದ ಎನ್.ಕೆ.ರಾಜೇಶ್ ನಾಯ್ಡು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.

ʻಸುಖೀಭವ’ ಹೆಸರಿನಂತೆ ಪ್ರಾರಂಭದಿಂದಲೂ ಯಾವುದೇ ಅಡೆತಡೆ ಇಲ್ಲದೆ ಎಲ್ಲಾ ಕೆಲಸಗಳು ಸುಗಮವಾಗಿ ಮುಗಿದಿದೆ. ಗೆಳಯ, ಹಿತೈಷಿ ‘ರಾಬರ್ಟ್’ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಗೌಡ ಇವರ ಸ್ಪೂರ್ತಿಯಿಂದಲೇ ನಿರ್ಮಾಣ ಮಾಡಿದೆ ಎನ್ನುತ್ತಾರೆ ಸಂತೋಷ್ ಕುಮಾರ್.

ಚಿತ್ರದ ನಿರ್ದೇಶಕರು ಮಾತನಾಡಿ, ಪ್ರೀತಿ, ಭಾವನೆಗಳು, ಹಾಸ್ಯ ಹಾಗೂ ಮನರಂಜನೆಯಿಂದ ಕೂಡಿದ ಚಿತ್ರವಾಗಿದೆ. ಪ್ರಾರಂಭದಲ್ಲಿ ಬೇರೆ ಟೈಟಲ್ ಇಡಲಾಗಿತ್ತು. ಕಥೆ ಬರೆದು ಮುಗಿಸುವಷ್ಟರಲ್ಲೆ ʻಸುಖೀಭವ’ ಆಯಿತು. ಬದುಕಲ್ಲಿ ಮೊದಲ ಪ್ರೀತಿ ಒಳ್ಳೆಯ ಪ್ರೀತಿ ಎನ್ನುತ್ತಾರೆ. ಒಂದು ಹಂತದಲ್ಲಿ ಅರ್ಥವಾಗಿ, ಅದನ್ನು ಹುಡುಕಿಕೊಂಡು ಹೋದಾಗ, ಅದು ಸಿಗುತ್ತದಾ? ಇಲ್ಲವಾ? ಇವೆಲ್ಲಾವನ್ನು ಸಕರಾತ್ಮಕ ರೀತಿಯಲ್ಲಿ ಏನು ಹೇಳಬೇಕೋ ಅದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಇದೊಂದು ಬದುಕಿನ ಪಯಣದ ಸಿನಿಮಾ ಎಂಬುದಾಗಿ ಎನ್.ಕೆ.ರಾಜೇಶ್ ನಾಯ್ಡು ಸಣ್ಣದೊಂದು ಮಾಹಿತಿ ಬಿಚ್ಚಿಟ್ಟರು.

ಈ ಚಿತ್ರಕ್ಕೆ ಮಹೇಂದ್ರ ನಾಯಕ, ಸುಶ್ಮಿತಾ ನಾಯಕ್ ಹಾಗೂ ವಿಯಾನ್‌ಶಿ ಹೆಗ್ಡೆ ನಾಯಕಿಯರು. ಉಳಿದಂತೆ ಗೌರವ್ ಶೆಟ್ಟಿ, ಶೋಭರಾಜ್, ರವಿಶಂಕರ್ ಗೌಡ, ಸುನಿಲ್ ಪುರಾಣಿಕ್, ತುಕಾಲಿ ಸಂತು, ಮೈತ್ರಿ, ಜಗ್ಗಿ ಮುಂತಾದವರು ಅಭಿನಯಿಸಿದ್ದಾರೆ. ಮೂರು ಹಾಡುಗಳಿಗೆ ಪ್ರಮೋದ್ ಮರವಂತೆ, ಕೊನೆಯ ಗೀತೆಗೆ ಸಂತೋಷ್ ಕುಮಾರ್ ಮತ್ತು ಎನ್.ಕೆ.ರಾಜೇಶ್ ನಾಯ್ಡು ಸಾಹಿತ್ಯ ಒದಗಿಸಿದ್ದಾರೆ. ಬಿ.ಜೆ.ಭರತ್-ಶುಭಮ್-ವಿಯಾನ್.ಎಸ್.ಎ ಸಂಗೀತ ಸಂಯೋಜಿಸಿದ್ದಾರೆ. ಈ ಪೈಕಿ ನಟ ಶರಣ್ (Sharan) `ಬೇಡ ಮಚ್ಚಾ ಬೇಡ’ ಸಾಲಿನ ಗೀತೆಗೆ ಧ್ವನಿಯಾಗಿರುವುದು ವಿಶೇಷ.

ಛಾಯಾಗ್ರಹಣ ಎಸ್.ಬಿ.ಮಂಜುನಾಥ್ ನಾಯಕ್, ಕಾರ್ಯಕಾರಿ ನಿರ್ಮಾಪಕ ವಿನಯ್.ಎನ್, ಸಂಕಲನ ಮಧುತುಂಬುಕೆರೆ, ಸಾಹಸ ನರಸಿಂಹ ಅವರದಾಗಿದೆ. ಬೆಂಗಳೂರು, ಉಡುಪಿ, ಸಕಲೇಶಪುರ, ಕಳಸ ಮುಂತಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

News Desk Sandalwood Times

error: Content is protected !!