ʻರಾಕ್ಷಸʼ ವೆಬ್ ಸರಣಿಯ ಟ್ರೈಲರ್ ಔಟ್- ಮತ್ತೆ ಖಾಕಿ ತೊಟ್ಟ ವಿಜಯ್ ರಾಘವೇಂದ್ರ
ಕನ್ನಡದ ಖ್ಯಾತ ನಟ ವಿಜಯ್ ರಾಘವೇಂದ್ರ (Vijay Raghavendra) ಅವರು ಮೊದಲ ಬಾರಿಗೆ ವೆಬ್ ಸರಣಿ ಸಿನಿಮಾದಲ್ಲಿ ನಟಿಸಿದ್ದಾರೆ. ರಾಕ್ಷಸನ ಕಥೆ ಹೇಳಲು ಅವರು ರೆಡಿಯಾಗಿದ್ದಾರೆ. Zee5ನ ಬಹುನಿರೀಕ್ಷಿತ ವೆಬ್ ಸರಣಿ ʻರಾಕ್ಷಸʼದ ಟ್ರೈಲರ್ ಬಿಡುಗಡೆ ಆಗಿ ಎಲ್ಲರ ಗಮನ ಸೆಳೆದಿದೆ.
ಇದೇ ಫೆಬ್ರವರಿ 20ರಿಂದ ಜೀ5ನಲ್ಲಿ ಪ್ರಸಾರಗೊಳ್ಳಲಿರುವ ಈ ವೆಬ್ ಸರಣಿಯು ಒಂದು ಕ್ರೈಮ್ ಥ್ರಿಲ್ಲರ್ ಕಥೆಯಾಗಿದ್ದು ಒಂದು ಘಟನೆಯ ಸುತ್ತ ನಡೆಯುವ ವಿವಿಧ ರೋಚಕ ಘಟನೆಗಳನ್ನು ಆಧರಿಸಿರುತ್ತದೆ. ಮಲಪ್ರಭಾ ನದಿಯ ದಂಡೆಯ ಸುತ್ತ ನಡೆಯುವ ಆಶ್ಚರ್ಯಕರ ಘಟನೆಗಳನ್ನು 7 ಸಂಚಿಕೆಗಳಲ್ಲಿ ಈ ವೆಬ್ ಸರಣಿಯು ಹೇಳುತ್ತದೆ.
ಉತ್ತರ ಕರ್ನಾಟಕದ ಮೊಟ್ಟ ಮೊದಲ ವೆಬ್ ಸೀರೀಸ್ “ರಾಕ್ಷಸ”
ಉತ್ತರ ಕರ್ನಾಟಕದ ಸವದತ್ತಿ ಗ್ರಾಮದಲ್ಲಿ ಮೊಸಳೆ ಅಟ್ಯಾಕ್ ಇಂದ ಸಿಕ್ಕ ಹಲವಾರು ಶವಗಳ… ಉತ್ತರ ಹುಡುಕುತ್ತಿರುವ, ರಾಕ್ಷಸನ ಹುಡುಕಾಟದಲ್ಲಿ SI ಹನುಮಪ್ಪ..
Trailer Link 🔗 https://t.co/U9Nm5z0Cnd #ZEE5 #KannadaZEE5 #Raakshasa #KannadaZEE5Originals… pic.twitter.com/je45gGzUwv
— Tharun Sudhir (@TharunSudhir) February 11, 2026
ಈ ಟ್ರೈಲರ್ ಸಬ್ ಇನ್ಸ್ಪೆಕ್ಟರ್ ಹನುಮಪ್ಪ ಎಂಬ ಪಾತ್ರವನ್ನು ಪರಿಚಯಿಸುತ್ತದೆ. ಉತ್ತರ ಕರ್ನಾಟಕದ ಸವದತ್ತಿಯ ಎಲ್ಲಮ್ಮನ ಗುಡಿಯ ಬಳಿ ಮೊಸಳೆ ದಾಳಿಗೆ ಒಳಗಾಗುವ ಸರಣಿ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಹನೂಮಪ್ಪ ಬರುತ್ತಾನೆ. ಈ ಗೋಜಲಾದ ಪ್ರಕರಣಗಳ ಚಕ್ರವ್ಯೂಹವನ್ನು ಭೇದಿಸಲು ಬರುವ ಹನುಮಪ್ಪನಿಗೆ ಆಗುವ ತಳಮಳ, ಎದುರಾಗುವ ಸಮಸ್ಯೆಗಳು, ಇದು ಕೇವಲ ಒಂದು ಅಪರಾಧವೇ ಅಥವಾ ಬೇರೆ ಯಾವುದಾದರೂ ಮರ್ಮ ಅಡಗಿದೆಯೇ, ಇವೆಲ್ಲವನ್ನೂ ಕಾದು ನೋಡಬೇಕಿದೆ.
ಸುಹಾನ್ ಪ್ರಸಾದ್ ಮತ್ತು ಅಪೂರ್ವ ಅವರ ಬರವಣಿಗೆಯಲ್ಲಿ ಮೂಡಿ ಬರುತ್ತಿರುವ ಈ ವೆಬ್ ಸರಣಿಯಲ್ಲಿ ವಿಜಯ್ ರಾಘವೇಂದ್ರ, ಮಯೂರಿ (Mayuri Kyatari), ಅವಿನಾಶ್, ಮಾಳವಿಕಾ, ಅಪ್ಪಣ್ಣ,ಅಭಿಜೀತ್ ಮುಂತಾದವರು ನಟಿಸಿರುತ್ತಾರೆ. ಇದಕ್ಕೆ ಸುಹಾನ್ ಪ್ರಸಾದ್ ಆಕ್ಷನ್ ಕಟ್ ಹೇಳಿದ್ದಾರೆ. ಖ್ಯಾತ ನಿರ್ದೇಶಕ ತರುಣ್ ಸುಧೀರ್ ಅವರ ನಿರ್ಮಾಣ ಸಂಸ್ಥೆಯಡಿ ಈ ವೆಬ್ ಸರಣಿಯು ನಿರ್ಮಾಣಗೊಂಡಿದೆ. ಇದು ತರುಣ್ ಸುಧೀರ್ ಅವರ ಮೊದಲ ವೆಬ್ ಸರಣಿಯಾಗಿರುತ್ತದೆ.
ಇದರ ಕುರಿತು ಮಾತನಾಡಿದ ನಟ ವಿಜಯ್ ರಾಘವೇಂದ್ರ, ರಾಕ್ಷಸ ಒಂದು ವಿಶೇಷವಾದ ಕಥೆಯಾಗಿದೆ. ಅಷ್ಟು ಸುಲಭವಾಗಿ ಇದು ತನ್ನ ಸಸ್ಪೆನ್ಸ್ ಅಂಶಗಳನ್ನು ಬಿಟ್ಟುಕೊಡುವುದಿಲ್ಲ. ನನಗೆ ಈ ಕಥೆಯ ಬಗ್ಗೆ ಇಷ್ಟವಾಗಿದ ಅಂಶಗಳು: ಇದರಲ್ಲಿರುವ ಮೌನ, ಆಡದ ಮಾತುಗಳು, ಗೋಜಲಾದ ರಹಸ್ಯಗಳು. ಇವೆಲ್ಲವೂ ಹೇಗೆ ಹನುಮಪ್ಪನ ಮೇಲೆ ಆಳವಾದ ಪ್ರಭಾವ ಬೀರುತ್ತದೆ ಎಂಬುದು ಗಮನಾರ್ಹವಾಗಿದೆ. ಈಗಾಗಲೇ ಈ ರೋಚಕ ಕಥೆಯ ತುಣುಕು ಟ್ರೈಲರ್ನಲ್ಲಿ ಬಿಡುಗಡೆ ಆಗಿದೆ ಎಂದು ಹೇಳಿದರು.
ಇದರ ಕುರಿತು ಮಾತನಾಡಿದ ನಿರ್ಮಾಪಕ ತರುಣ್ ಸುಧೀರ್, ವಿಭಿನ್ನ ಕಥೆಗಳನ್ನು ನಿರ್ಮಾಣ ಮಾಡಬೇಕೆಂಬುದು ನನ್ನ ಆಸೆ. ಅದೇ ನಿಟ್ಟಿನಲ್ಲಿ ‘ರಾಕ್ಷಸ’ ನನ್ನ ಗಮನಕ್ಕೆ ಬಂತು. ಈ ಕಥೆಯು ಉತ್ತರ ಕರ್ನಾಟಕದ ಛಾಯೆಯನ್ನು ಹೊಂದಿರುತ್ತದೆ. ಇದು ಎಲ್ಲರ ಗಮನ ಸೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಮಲಪ್ರಭಾ ನದಿಯ ರಹಸ್ಯವನ್ನು ರೋಚಕವಾಗಿ ಕಥೆ ಬಿಡಿಸಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ವಿಭಿನ್ನವಾದ ಕಥಾ ಹಂದರ, ಉತ್ತಮ ಛಾಯಾಗ್ರಹಣ, ಆಳವಾದ ಅಭಿನಯ ಇವೆಲ್ಲವುದರ ಮೂಲಕ ʻರಾಕ್ಷಸʼ ಎಲ್ಲರ ಗಮನ ಸೆಳೆಯಲು ಸಜ್ಜಾಗಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಬೆಂಗಾಲಿ, ಮರಾಠಿ, ಇಂಗ್ಲಿಷ್ ಭಾಷೆಗಳು ಸೇರಿದಂತೆ ಹಲವಾರು ಭಾಷೆಗಳ ಚಿತ್ರಗಳನ್ನು ಪ್ರಸಾರ ಮಾಡುತ್ತದೆ.

