ದ್ವಾರಕೀಶ್ ಪ್ರಶಸ್ತಿ ಸ್ವೀಕರಿಸಿದ ಸಿನಿಮಾ ಪತ್ರಕರ್ತ ಜಗದೀಶ್ ಕುಮಾರ್
ಕನ್ನಡ ಚಿತ್ರರಂಗದ ಬೆಳವಣಿಗೆಯನ್ನು ಕಳೆದ ಮೂರು ದಶಕಗಳಿಂದ ನಿರಂತರವಾಗಿ ಗಮನಿಸುತ್ತಾ, ಬೆಳ್ಳಿತೆರೆಯ ಹಿಂದಿನ ಕಥೆಗಳನ್ನು ಜನರಿಗೆ ಉಣಬಡಿಸುತ್ತಾ ಬಂದಿರುವ ಹಿರಿಯ ಸಿನಿಮಾ ಪತ್ರಕರ್ತ ಎಸ್. ಜಗದೀಶ್ ಕುಮಾರ್ (S. Jagadeesh Kumar) ಮುಡಿಗೆ ಈಗ ಮತ್ತೊಂದು ಪ್ರತಿಷ್ಠಿತ ಗರಿ ಸಂದಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ನೀಡುವ ಈ ಸಾಲಿನ ‘ದ್ವಾರಕೀಶ್ ಸ್ಮಾರಕ ಪ್ರಶಸ್ತಿ’ಗೆ ಜಗದೀಶ್ ಭಾಜನರಾಗಿದ್ದು, ಮೊನ್ನೆ ಬೀದರ್ನಲ್ಲಿ ನಡೆದ ಪತ್ರಕರ್ತರ ಮಹಾ ಸಮ್ಮೇಳನದಲ್ಲಿ ಈ ಸಂಭ್ರಮ ಮೇಳೈಸಿದೆ. ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ಆರ್. ಅಶೋಕ್ ಹಾಗೂ ಸಚಿವ ಈಶ್ವರ ಖಂಡ್ರೆ ಅವರ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಸಿನಿಮಾ ಪತ್ರಿಕೋದ್ಯಮದ ಬದ್ಧತೆಗೆ ಸಂದ ಗೌರವ ಇದಾಗಿದೆ.

ದೃಶ್ಯ ಮಾಧ್ಯಮದ ಉತ್ತುಂಗದ ಕಾಲದಲ್ಲಿ ಈ ಟಿವಿ, ಉದಯ ಹಾಗೂ ಕಸ್ತೂರಿ ವಾಹಿನಿಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುನ್ನಡೆಸಿದ ಹೆಗ್ಗಳಿಕೆ ಇವರದು. ‘ಡಿಮ್ಯಾಂಡಪ್ಪೋ ಡಿಮ್ಯಾಂಡ್’, ‘ಹೃದಯದಿಂದ’, ‘ಕಾಮಿಡಿ ಟೈಮ್’ ಮತ್ತು ‘ಸಕತ್ ಸಿನಿಮಾ’ದಂತಹ ಕಾರ್ಯಕ್ರಮಗಳು ಇಂದಿಗೂ ಪ್ರೇಕ್ಷಕರ ನೆನಪಿನಲ್ಲಿ ಹಸಿರಾಗಿವೆ. ಲೈವ್ ಶೋಗಳಿರಲಿ ಅಥವಾ ಬೃಹತ್ ಫಿಲ್ಮ್ ಅವಾರ್ಡ್ ಕಾರ್ಯಕ್ರಮಗಳಿರಲಿ, ಜಗದೀಶ್ ಅವರ ಸಂಘಟನಾ ಚಾತುರ್ಯ ಸದಾ ಎದ್ದು ಕಾಣುತ್ತಿತ್ತು. ಮುದ್ರಣ ಮಾಧ್ಯಮದಲ್ಲಿ ‘ಈ ಸಂಜೆ’ ಪತ್ರಿಕೆಯ ಮೂಲಕ ಸುದೀರ್ಘ ಕಾಲ ಜನಪ್ರಿಯ ವರದಿಗಳನ್ನು ನೀಡಿದ್ದ ಇವರು, ಇಂದು ಡಿಜಿಟಲ್ ಯುಗಕ್ಕೆ ತಕ್ಕಂತೆ ‘ಸಿನಿ ಸುದ್ದಿ’ ವೆಬ್ ಪೋರ್ಟಲ್ ಸಂಪಾದಕರಾಗಿ ಚಿತ್ರರಂಗದ ಬಿಸಿ ಬಿಸಿ ಸುದ್ದಿಗಳನ್ನು ನೀಡುತ್ತಿದ್ದಾರೆ.

ಪ್ರಸ್ತುತ ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಜಗದೀಶ್, ಕೇವಲ ವರದಿಗಾರರಾಗಿ ಉಳಿಯದೆ ವಾಣಿಜ್ಯ ಮಂಡಳಿಯ ವಿತರಕರ ವಲಯದಲ್ಲೂ ಸಕ್ರಿಯರಾಗಿದ್ದಾರೆ. ಕಲಾವಿದರು, ನಿರ್ಮಾಪಕರು ಹಾಗೂ ತಂತ್ರಜ್ಞರ ನಡುವೆ ಸ್ನೇಹದ ಸೇತುವೆಯಂತಿರುವ ಇವರಿಗೆ, ಕುಳ್ಳ ದ್ವಾರಕೀಶ್ ಅವರ ಹೆಸರಿನ ಪ್ರಶಸ್ತಿ ಲಭಿಸಿರುವುದು ಚಿತ್ರರಂಗದ ಹಿತೈಷಿಗಳಲ್ಲಿ ಹರ್ಷ ಮೂಡಿಸಿದೆ. ಮೂರು ದಶಕಗಳ ಕಾಲ ಚಿತ್ರರಂಗದ ಏಳುಬೀಳುಗಳನ್ನು ಆಪ್ತವಾಗಿ ಕಂಡು ಬರೆದ ಜಗದೀಶ್ ಅವರಿಗೆ ಈ ಮನ್ನಣೆ ಅತ್ಯಂತ ಸೂಕ್ತವಾಗಿದೆ.

